ಅಶೋಕ ಹುಗ್ಗಣ್ಣವರ ನಾಡು ಕಂಡ ಸಜ್ಜನ, ವಿಧೇಯ ಸಂಗೀತಗಾರ. ಔತ್ತರೇಯದಲ್ಲಿದ್ದ ಹಿಂದೂಸ್ಥಾನೀ ಸಂಗೀತಸರಿತ್ತನ್ನು ದಾಕ್ಷಿಣಾತ್ಯಕ್ಕೂ ಹರಿಸಿ, ಪ್ರವಹಿಸುವಂತೆ ಮಾಡಿದ ಭಗೀರಥ. ಮೂರು ದಶಗಳಿಗೂ ಹೆಚ್ಚು ಕಾಲ ಸಂಗೀತಾಚಾರ್ಯರಾಗಿ ನೂರಾರು ಶಿಷ್ಯಸಂತತಿಯನ್ನು ನೀಡಿದ್ದು ಅವರ ಹಿರಿಮೆ. ತಮ್ಮ ಕಂಠಸಿರಿಯ ಗಾಯನದಿಂದ ಅಭಿಮಾನ ಬಳಗವನ್ನು ಹೊಂದಿದ ಸ್ವಾಭಿಮಾನಿ. ದಿಗಂತಗಳಲ್ಲಿ ಯಶಸ್ಸನ್ನು ಪಡೆದರೂ ಮಕ್ಕಳೊಂದಿಗೆ ಮಕ್ಕಳಾಗಿ, ಹಿರಿಯರೊಂದಿಗೆ ಹಿರಿಯರಾಗಿ, ಜ್ಞಾನಿಗಳೊಂದಿಗೆ ಜ್ಞಾನಿಗಳಾಗಿ, ಸಂಗೀತಜ್ಞರೊಂದಿಗೆ ಸಂಗೀತಜ್ಞರಾಗಿದ್ದ ಇವರ ಬದುಕು ಆದರ್ಶ.
ಸದಾ ಸಂಗೀತವನ್ನೇ ಉಚ್ಛ್ವಾಸನಿಶ್ಶ್ವಾಸಗಳನ್ನಾಗಿಸಿಕೊಂಡಿದ್ದ ಇವರಿಗೆ ಶ್ರೀರಾಮಸಾಯುಜ್ಯವು ಪ್ರಾಪ್ತವಾಗಲಿ.